Skip to main content

ಮೋಸದ ಆಟ ಕಲಿಸಿದ ಜೀವನ ಪಾಠ


     ಒಂದು ಖಾಯಂ ಉದ್ಯೋಗ ದೊರಕುವ ಮುನ್ನ ದುಡಿಮೆಯ ಅವಕಾಶಗಳಿಗಾಗಿ ಅವಿರತ  ಹುಡುಕಾಟ. ವಾಸವಿದ್ದದ್ದು ಹಳ್ಳಿ .ಕೆಲಸದ ಮಾಹಿತಿ ದೊರೆಯಬಹುದಾದ ಇಂಗ್ಲಿಷ್ ಪತ್ರಿಕೆ ಇರಲಿ,ಹಳೆಯ ಕನ್ನಡ ಪತ್ರಿಕೆ ಸಿಗುವುದೇ ದುರ್ಲಭವಾಗಿತ್ತು.ಕೆಲಸಗಳ ಅವಕಾಶವೂ ಕಡಿಮೆ.ಮನೆಯಲ್ಲಿ  ಭೂಸುಧಾರಣಾ  ಕಾನೂನಿನ ಅನ್ವಯ ಇದ್ದ ಭೂಮಿಯೆಲ್ಲವನ್ನು ಕಳೆದುಕೊಂಡ ಹೊಸತು.ತೀವ್ರ ಆರ್ಥಿಕ ಬಿಕ್ಕಟ್ಟು. ದುಡಿಮೆಗೆ ಯಾವ ಕೆಲಸ ವಾದರೂ ಸಾಕು ಎನ್ನುವ ತೀರ್ಮಾನಕ್ಕೆ ಬಂದಿದ್ದೆ.ಹೀಗಿರುವಾಗ ಕಟ್ಟಡ ನಕ್ಷೆ ಮಾಡುವ ಅವಕಾಶ ದೊರೆಯಿತು.ಈ ಸಂಬಂಧವಾಗಿ ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ ಹೋಗಿ ಅಧಿಕಾರಿಗಳನ್ನು ಕಂಡು ಬರಬೇಕಾಗಿತ್ತು. ತಂದೆಯವರಲ್ಲಿ ಕೇಳಲಾಗಿ ಸದ್ಯಕ್ಕೆ ಹಣ ದೊರೆಯುವಂತಿರಲಿಲ್ಲ.ಆದಾಯವಿಲ್ಲದ ನನಗೆ ಯಾರು ತಾನೇ ಸಾಲ ಕೊಟ್ಟಾರು? ಅವಕಾಶ ತಪ್ಪುವುದೆಂಬ ಚಿಂತೆ ಯಲ್ಲಿ ಕೈಕೈಹಿಸುಕಿಕೊಳ್ಳಬೇಕಾದ ಪರಿಸ್ಥಿತಿ. ಹೇಳಿಕೊಳ್ಳಲಾಗದ ದುಃಖ. ಕಣ್ಣೀರು.
ಅದನ್ನು ಕಂಡ ನನ್ನ ತಾಯಿ ಸಮಾಧಾನ ಮಾಡುತ್ತಾ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಲುದಿನಗಳಿಂದ ಜತನದಿಂದ ಇಟ್ಟು ಕೊಂಡಿದ್ದ ಅದೂ ದೇವರ ಬಳಿ ಇಟ್ಟಿದ್ದ  ೧೦ ರೂಪಾಯಿ ಕೊಡುವುದಾಗಿ ಅದನ್ನು ಸರಿಯಾದ ಉದ್ದೇಶಕ್ಕಾಗಿ ಬಳಸಬೇಕೆಂದು  ಕಿವಿಮಾತಿನೊಂದಿಗೆ ಕೊಟ್ಟರು. ಎಂದೋ ಪೂಜೆ ಮಾಡಿಸಿಕೊಂಡು ಒಳಸೇರಿದ್ದ ಹತ್ತರ ನೋಟು ಇಂದು ಒಂದು ಘನ ಉದ್ದೇಶ ಕ್ಕಾಗಿಯೇ ನನ್ನ ಕೈಸೇರಿತು.

    ಬೆಳಿಗ್ಗೆ ಯೇ ಮನೆ ಬಿಟ್ಟು ನಾಲ್ಕು ಮೈಲು ದೂರದ ಸಾಗರಕ್ಕೆ ನಡೆದು,ಬಸ್ಸ್ ಮೂಲಕ  ಶಿವಮೊಗ್ಗ  ಸೇರಿದಾಗ  ಹನ್ನೊಂದು ಗಂಟೆಯಾಗಿತ್ತು. ಶಿವಪ್ಪನಾಯಕ ಅರಮನೆ ಮೂಲಕ ಗಾಂಧಿನಗರದಲ್ಲಿನ ಕಛೇರಿ ಯತ್ತ ಹೆಜ್ಜೆ  ಹಾಕುತ್ತಿದ್ದೆ. ಕಾಲುದಾರಿಯಲ್ಲಿ  ಸೇರಿದ್ದ ಜನರ ಗುಂಪಿನತ್ತ ಕುತೂಹಲದ ಹೆಜ್ಜೆ. ನೋಡಲಾಗಿ ಅಲ್ಲಿ ಚಿಕ್ಕ ಹಾಸಿನ ಮೇಲೆ ಆರು ಚಿತ್ರಗಳು.ಅದರ ಮೇಲೆ ಬೋರಲಾಗಿ ಹಾಕಿದ ಡಬ್ಬಗಳು.ಇಷ್ಟ ಇದ್ದವರು ಆಯಾ ಚಿತ್ರಗಳ ಮೇಲೆ ತಮ್ಮ ಇಷ್ಟದ ಹಣ ಇಡಬೇಕು.ಇನ್ನೊಂದು ಸೂಚಕವಿರುವ ತಿರುಗುವ ಚಕ್ರ. ಅದೂ ಆರು ಚಿತ್ರಗಳನ್ನು ಹೊಂದಿದೆ. ಆ ಚಕ್ರವನ್ನು ಆಟವಾಡಿಸುವವನು ಒಮ್ಮೆ ತಿರುಗಿಸುವನು. ಚಕ್ರ ನಿಂತಾಗ ಸೂಚಕ ಯಾವ ಚಿತ್ರ ವನ್ನು ತೋರಿಸುವುದೋ ಆ ಚಿತ್ರ ಗೆದ್ದಂತೆ. ಆ ಚಿತ್ರಕ್ಕೆ ಹಣ ಇಟ್ಟವರಿಗೆ ಇಟ್ಟ ಹಣದ ಹತ್ತು ಪಟ್ಟು ಹಣವನ್ನು ಅವನು ನೀಡುತ್ತಾನೆ. ಇದು ಆಟದ ವಿವರ. ನನಗೇನೋ ಆಟವು ಹೊಸದಾಗಿದ್ದರೂ ಸುಲಭವಾಗಿ ನಾನು ಹಣ ಮಾಡಿ ಕೊಳ್ಳಬಹುದು ಎಂದೆನಿಸಿತು. ಕೇಳಲಾಗಿ ಅವನೂ  ಹೇಳಿದ.ಹಣ ಹೂಡಿ ಎರಡು ನಿಮಿಷದಲ್ಲಿ ಹತ್ತರಷ್ಟು ಪಡೆಯಿರಿ ಎಂದಿದ್ದು ಧೈರ್ಯ ವಾಯಿತು. ಬಸ್ಸ್ ಚಾರ್ಜು ಕಳೆದು ಉಳಿದಿದ್ದ ನನ್ನ ಐದು ರೂಪಾಯಿ ಮಾತ್ರ ನನ್ನಲ್ಲಿತ್ತು. ಅದನ್ನೇ ಒಂದು ಚಿತ್ರದ ಮೇಲೆ ಇಟ್ಟೆನು. ಆಡಿದ ಆಟ ಐವತ್ತು ರೂಪಾಯಿ ತಂದಿತು.ಎಂಥಾ ಅದೃಷ್ಟ ವಂತ ಎಂದು ಸೇರಿದವರಲ್ಲಿ ನಾಲ್ಕು ಜನ ನನ್ನನ್ನು ಹೊಗಳಿದರಲ್ಲದೆ ಇನ್ನೊಮ್ಮೆ ಅದೇ ಪ್ರಯತ್ನ ಮಾಡಲು ಸಲಹೆ ಕೊಟ್ಟರು. ಯೋಚನೆ ಮಾಡದೆ ಬಂದಿದ್ದ     ಪೂರ್ತಿ ಹಣ ಹೂಡಿದೆ. ಮತ್ತೊಮ್ಮೆ ಉರುಳಿದ ಚಕ್ರ ಬೇರೇನೋ ತೋರಿಸಿತು. ಕೇಳಿದರೆ ನಿಮ್ಮ ಆಟ ಆಯಿತು. ಬೇರೆಯವರಿಗೆ ಬಹುಮಾನ ವಾಯಿತೆಂದರು. ನನಗೇ ಎಂದೆ.ನೀವು ಸೋತಿರಲ್ಲ ಎನ್ನುತ್ತಾ ಮೊದಲು ಪುಸಲಾಯಿಸಿದವರೆಲ್ಲಾ ದೂರಕ್ಕೆ ತಳ್ಳಿದರು. ಹೊಸಬರಿಗೆ ಅವಕಾಶ ಕೊಟ್ಟರು.

    ಎದೆ ಧಸಕ್ಕೆಂದಿತು. ಕೈನಲ್ಲಿ ಹಣವೇ ಇಲ್ಲ ಸಾಲದೆಂಬಂತೆ ಸೋಲಿನ ಅವಮಾನ. ತಲೆ ಮೇಲೆ ಬಿಸಿಲು. ತಾಳದ ಹಸಿವು. ಹಣವಿಲ್ಲ. ನಡೆಯೋಣವೆಂದರೆ  ೬೦ ಕಿಲೋ ಮೀಟರ್ ದೂರ. ಕಣ್ಣು ಕತ್ತಲು ಬರುತ್ತಿದೆ. ಹತಾಶನಾಗಿ ದೊಡ್ಡದಾಗಿ ಅಳಲು ಪ್ರಾರಂಭಿಸಿದೆ.ಅಳು ಕೇಳಿದ ಆಟದವನು ದೂರಕ್ಕೆ ಹೋಗಿ ಅಳಬೇಕೆಂದೂ ಹತ್ತಿರ ನಿಲ್ಲಬಾರದೆಂದು ಗದರಿಸಿದ. ರಸ್ತೆಯ ಆ ಕಡೆ ಕಾಲುದಾರಿಯತ್ತ ನಡೆದೆ. ಯೋಚಿಸುತ್ತಾ ಅಲ್ಲೇ ಇದ್ದ ಹೋಟೇಲಿನಲ್ಲಿ ನೀರು ಕುಡಿದೆ. ಅಲ್ಲಿಯ ಯಜಮಾನರಿಗೆ ಪರಿಸ್ಥಿತಿ ಹೇಳಿಕೊಂಡೆ. ಅತ್ತಿತ್ತ ತಲೆಯಾಡಿಸಿ ಹೊರನಡೆಯಲು ಹೇಳಿದರು.ಯೋಚಿಸುತ್ತಾ, ಮೊದಲು ಹೋದ ಕೆಲಸವಾದರೂ ಮುಗಿಸೋಣವೆಂದು ಕಛೇರಿಗೆ ಹೋದೆ. ಅದೃಷ್ಟಕ್ಕೆ ಆಗ ತಾನೇ ಅಧಿಕಾರಿಗಳು ಊಟ ಮುಗಿಸಿ ಬಂದಿದ್ದರು. ಅವರೊಂದಿಗೆ ಚರ್ಚಿಸಿ ಸಲಹೆ ಪಡೆದು ಅಲ್ಲೇ ಇದ್ದ ನೀರು ಕುಡಿದು ಅದೇ ರಸ್ತೆ ಯಲ್ಲಿ ಹೆಜ್ಜೆ ಹಾಕಿದೆ.
  
    ಆಟ ನಡೆದ ಜಾಗ ಖಾಲಿಯಾಗಿತ್ತು. ಈಗಂತೂ ನನ್ನಿಂದ ಕಳೆದ ಹಣದ ವಿಳಾಸವೂ ಇಲ್ಲವಾದದ್ದು ಹೊಸ ಅಳು ಹೊರಬರತೊಡಗಿತು.ಈಗ ನನಗಿರುವುದು ಎರಡು ದಾರಿ. ಅಲ್ಲೇ ಇರುವ ಅಂಗಡಿ ಗಳಲ್ಲಿ ಇರುವ ಪರಿಸ್ಥಿತಿ ಹೇಳಿ  ಬೇಡಿ ಸಾಲ ಪಡೆದು ಊರಿಗೆ ಹೋಗುವುದು.ಇಲ್ಲವೇ ಬಸ್ಸಿನವನ ಬಳಿ ಬೇಡಿ ಊರು ಸೇರುವುದು.ಮುಂದಿನ ಮೂರು ದಿನಗಳಲ್ಲಿ ದುಡಿದು ಹಣ ವಾಪಸ್ ಮಾಡುವುದು.ಈ ನಿರ್ಧಾರ ಮನಸ್ಸಿಗೆ ಸರಿ ಎನಿಸಿದರೂ ನನಗೆ ಸಾಲ ಕೊಡುವವರು ಯಾರು.ಹೀಗೆಂದು ಕೊಂಡೇ ಐದಾರು ಕಡೆ ಇರುವ ಪರಿಸ್ಥಿತಿ ಹೇಳಿದೆ. ಕೇಳಿ  ಮುಸಿಮುಸಿ ನಕ್ಕರು ಕೆಲವರು.ನಾನು ಸುಳ್ಳು ಹೇಳುತ್ತಿದ್ದೇನೆ, ಇಂಥಾ ಸಾವಿರ ಮಂದಿ ದಿನಾ ಬರ್ತಾರೆ ಎಂದು ಕೆಲವರು ಹೊರ ದೂಡಿದರು.

    ಹಾಗೇ ಮುಂದುವರಿಯುತ್ತಾ ಒಂದು ಗ್ಲಾಸ್ ಅಂಗಡಿ ಯವರಲ್ಲಿಗೆ ಹೋದೆ. ಅಲ್ಲಿರುವ ಯಜಮಾನರ ಬಳಿ ಸತ್ಯಾಂಶವನ್ನು ಬಿಡಿಬಿಡಿಯಾಗಿ ಹೇಳಿ ಬೇಡಿಕೆಯನ್ನು ಮುಂದಿಟ್ಟೆ.ಅವರಿಗೇಕೋ ಮನ ಕರಗಿತು.ಆಗ ಮಧ್ಯಾಹ್ನ ನಾಲ್ಕು ಘಂಟೆ. ಚಹಾ ತರಿಸಿಕೊಟ್ಟರು. ತಾಯಿ ಕೊಟ್ಟ ಹಣಕ್ಕೆ ಬೆಲೆ ಕೊಡದ ನನಗೆ ಬೈದರು. ಐದು ರೂಪಾಯಿ ಕೊಟ್ಟು ವಾಪಸ್ ಮಾಡಲು ವಾರದ ಗಡುವು ನೀಡಿದರು. ಮಾಡಿದ ತಪ್ಪಿಗೆ ಪಶ್ಚಾತ್ತಾಪವೊ  , ಅವರ ಸಹಾಯಕ್ಕೆ ಸಂತೋಷವೊ, ಇನ್ನೊಮ್ಮೆ ರೋಧನ ಸೇವೆ. ಅವರಿಗೆ ಪಾದ ಮುಟ್ಟಿ ನಮಸ್ಕರಿಸಿ ಇನ್ನೆಂದೂ ಇಂತಹ  ತಪ್ಪು ಮಾಡುವುದಿಲ್ಲ ವೆಂಬ ಭರವಸೆ ಕೊಡುವುದರೊಂದಿಗೆ ಹೊರಟೆ.

    ಸಾಗರ  ಸೇರಿದಾಗ ರಾತ್ರಿ ಎಂಟು.ಕತ್ತಲಲ್ಲಿ ನಾಲ್ಕು ಮೈಲಿ ನಡೆದು ಮನೆ ಸೇರಿದೆ. ಕಛೇರಿಯ ವಿಷಯವಷ್ಟನ್ನೇ ಮನೆಯಲ್ಲಿ ತಿಳಿಸಿದೆ.ಊಟ ಮುಗಿಸಿ ಮಲಗಿದರೂ ನಿದ್ದೆಯಿಲ್ಲ, ನೆಮ್ಮದಿ ಇಲ್ಲ.ಅಮ್ಮನ ಹಣಕ್ಕೆ ನ್ಯಾಯ ಕೊಡದ ಬೇಜವಾಬ್ದಾರಿ ವ್ಯಕ್ತಿ. ಅಂತರಾತ್ಮದಲ್ಲಿ ಅಪರಾಧಿ.ಸಾಲಗಾರ.ಇರುವ ಜವಾಬ್ದಾರಿ ತಲೆಯ ಮೇಲೂ ಒಳಗೂ ಕಾಡ ಲಾರಂಭಿಸಿತು.ಮುಂದಿನ ನಾಲ್ಕು ದಿನಗಳಲ್ಲಿ ದುಡಿಮೆ ಮಾಡಿ ಶಿವಮೊಗ್ಗದ ಮಹನೀಯರಿಗೆ ಕೃತಜ್ಞತೆ ಹೇಳಿ ಹಣ ವಾಪಸ್ ಮಾಡಿದೆ. ಅಮ್ಮನ ಹಣವನ್ನೂ ವಾಪಸು ಮಾಡಿದೆ.ಇದಾಗಿ ನಾಲ್ಕು ದಶಕಗಳು ಕಳೆದರೂ ವಿಷಯ ಹೊಚ್ಚ ಹೊಸದಾಗಿ ಮನಸ್ಸಿಗ ನಿಸುತ್ತದೆ. ಎಂಥಾ ಕೆಲಸ ಮಾಡಿದೆ ಥೂ.ಎಂದು. ಆ ಮೋಸದ ಆಟ ಕಲಿಸಿದೆ ಜೀವನ ಪಾಠ    

Comments

  1. ಹೃದಯಸ್ಪರ್ಶಿ ಮತ್ತು ಉತ್ತೇಜನಕಾರಿ ಬರಹ

    ReplyDelete
  2. ನಿಮ್ಮ ಬಾಲ್ಯದ ಈ ಘಟನೆ, ನೀವು ಇಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿ ಯಾಗಿದೆ ಎಂಬುದು ನನ್ನ ಅಭಿಪ್ರಾಯ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನವನ್ನು ಸಂಪೂರ್ಣ ವಾಗಿ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಮಹಾನ್ ವ್ಯಕ್ತಿ ನೀವು ಎಂದರೆ ಬಹುಶಃ ಅತಿಶಯೋಕ್ತಿ ಯಾಗಲಾರದು.

    ReplyDelete
  3. ತಮ್ಮ ಅಭಿಮಾನದ ಅಭಿಪ್ರಾಯ ಸ್ವಲ್ಪ ಹಿರಿದಾಗಿದೆ.ಉತ್ತೇಜನಕಾರಿಯಾಗಿದೆ.ಧನ್ಯವಾದಗಳು.

    ReplyDelete
  4. ಮೈನವಿರೇಳಿಸುವಂತಹ ಲೇಖನ. ಬಾಲ್ಯದಿಂದಲೂ ಧೈರ್ಯ, ಸ್ಥೈರ್ಯ ಗಳನ್ನು ಒಗ್ಗೂಡಿಸಿಕೊಂಡೇ ಬೆಳೆದಿರೋದು, ಅದರ ಸಮಯೋಚಿತ ಉಪಯೋಗ, ನಿಮಗೆ ವರವಾಗಿದೆ. ಅಂದಿನಿಂದ ಇಂದಿನವರೆಗೂ ಎಲ್ಲ ಕ್ಷೇತ್ರಗಳಲ್ಲೂ ನೀವು ಅಡಿಇಟ್ಟು ಜಯಶಾಲಿಯಾಗಿರುವಂತಾಗಿದೆ. ಇದು ನಿಮ್ಮ ಆತ್ಮಸ್ಥೈರ್ಯದ ಫಲವಲ್ಲವೇ. ಮಾದರಿ ಜೀವನ ನಿಮ್ಮದು. ಇತ್ತೀಚೆಗೆ ಅದನ್ನು ಮನೋಜ್ಞವಾಗಿ ಬರವಣಿಗೆಗೆ ಇಳಿಸುವ ಕಲೆಯೂ ಒಲಿದಿದೆ.

    ReplyDelete
  5. ಮತ್ತೊಮ್ಮೆ ಓದಬೇಕೆನಿಸಿ ಓದಿದಾಗ ಅನಿಸಿತು, ನಿಮ್ಮ ಬಾಲಿಶ ಬುದ್ಧಿಯಲ್ಲೂ ಅದನ್ನೇ ಸಮರ್ಥಿಸಿಕೊಳ್ಳದೆ ಪಾಠ ಕಲಿತದ್ದು, ಬಹುಶಃ ನಿಮ್ಮಲ್ಲಿದ್ದ ಸತ್ಯದ ಅರಿವಿನಿಂದಲೇನೋ. ಲೇಖನದಲ್ಲಿ ಎಳೆಗಳನ್ನು ಒಪ್ಪವಾಗಿ ಜೋಡಿಸಿದ್ದೀರಿ. ಮನದಾಳದಿಂದ ಅಂದರೂ ಸರಿಯೇ.

    ReplyDelete
  6. Yes Ramachandra, indeed situations in life gives invaluable lessons and those who learn tgeth lessons, necne sees back in life.

    ReplyDelete
  7. Even now this kind of game / cheating is seen. Mainly this happens at tourist spots. People continue to loose only. Very few only take a lesson out of it and implement good things. I remember a saying .# Mistakes do happen in every body's life. An intelligent man will remember it for ever and never repeats it.
    Thanks Ramachandra for net repeating the mistake.
    With regards
    Gopinath NN

    ReplyDelete
  8. "ಅಂತರಾತ್ಮದ ಅಪರಾಧಿ"..... ಮನಸ್ಸಿನಲ್ಲಿ ಉಳಿಯುವಂತಹ ಪದಗಳು.
    ಮುಂದೆ ನಿಮ್ಮ ತಾಯಿಗೆ ವಿಷಯ ತಿಳಿಸಿದಿರಾ???

    ReplyDelete
  9. Heart touching.. It is good to make mistakes, get fool and have bad experiences when
    young, so that one can learn from it, otherwise they have pay more for their mistakes, foolishness and experience, especially when they become old.

    Also, bad people teach lessons and makes our life.

    Yenantheeri?

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...