ನಾವು ಚಿಕ್ಕಂದಿನಲ್ಲಿ ಆಡುತ್ತಿದ್ದ ಒಂದು ಆಟ, ಕಣ್ಣಾಮುಚ್ಚಾಲೆ. ಈ ಆಟದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದು ಒಬ್ಬರು ಒಂದು ಕಡೆ ಅಜ್ಜಿ ಎಂದು ಕರೆಸಿಕೊಂಡು ಕುಳಿತುಕೊಳ್ಳವರು. ಅವರು ಒಬ್ಬರ ಕಣ್ಣು ಮುಚ್ಚಿ -
"ಕಣ್ಣಾಮುಚ್ಚೆ, ಕಾಡೇ, ಗೂಡೇ,
ಉದ್ದಿನ ಮೂಟೆ, ಉರುಳೇಹೋಯ್ತು,
ನಮ್ಮಯ ಹಕ್ಕಿ ಬಿಟ್ಟೆಬಿಟ್ಟೆ, ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ"
ಹೀಗೆಂದು ಹಾಡುತ್ತಾಳೆ. ಉಳಿದ ಒಂದು ಅಥವಾ ಹೆಚ್ಚಿನ ಆಟಗಾರರು, ಹುಡುಕಿದರೆ ತಕ್ಷಣ ಸಿಗದಂತೆ, ತಮಗೆ ಬೇಕಾದ ಸ್ಥಳದಲ್ಲಿ ಅಡಗಿ ಕೊಳ್ಳಬೇಕು. ಹಾಡು ಮುಗಿಸಿದ ಅಜ್ಜಿಯು ತಾನು ಆವರೆಗೆ ಹಿಡಿದಿಟ್ಟುಕೊಂಡಿದ್ದ ಆಟಗಾರನನ್ನು ಬಿಡುತ್ತಾಳೆ. ಆ ಆಟಗಾರ ಅಡಗಿಕೊಂಡ ಉಳಿದವರನ್ನು ಹುಡುಕಬೇಕು. ಅವನು ಯಾರನ್ನು ಮೊದಲು ಹುಡುಕಿ ಮುಟ್ಟುವನೋ, ಅವನು ಮುಂದಿನ ಬಾರಿ ಕಣ್ಣುಮುಚ್ಚಿಸಿಕೊಂಡು ಮುಂದಿನ ಆಟ ಆಡಬೇಕು. ಹೀಗೆ ಆಟ ಪುನರಾವರ್ತನೆಯಾಗುತ್ತಾ ಮುಂದುವರಿದುಕೊಂಡು ಬೇಜಾರು ತಡೆ ಬರುವವರೆಗೂ ನಡೆಯುತ್ತದೆ.
ಈಗ ಈ ಹಾಡಿನ ರೂಪದ ಸಾಲುಗಳ ಬಗ್ಗೆ ಒಮ್ಮೆ ಪರಾಮರ್ಷಿಸಿ ವಿಮರ್ಶೆ ಮಾಡೋಣ. ಕೇವಲ ಆಟಕ್ಕಾಗಿ ಹಾಡು ಆದರೂ ಅದು ಕಾಣದ ದೇವರೊಂದಿಗೆ ಜೀವನದ ಕಡೆಯ ಹಂತದಲ್ಲಿ ನಡೆಯುವ ಒಂದು ಸಂಭಾಷಣೆ.
ಕಣ್ಣಾಮುಚ್ಚೆ - ಎಂದಾಗ ಈ ಪ್ರಾಣ ಕಣ್ಣು ಮುಚ್ಚುವುದರ ಮೂಲಕ ಹೊರಟುಹೋಯಿತು
ಕಾಡೇ ಗೂಡೆ - ಎಂದಾಗ ಹೋದ ಪ್ರಾಣದ ನಂತರ ಈ ದೇಹಕ್ಕೆ ಈ ಕಾಡು ಮಾತ್ರವೇ ಗೂಡು ಅಂದರೆ ಮನೆ ಎಂದು ಅರ್ಥ ಮಾಡಬಹುದು.
ಉದ್ದಿನ ಮೂಟೆ ಉರುಳೇಹೋಯ್ತು - ಎಂದರೆ ಉದ್ದಿನ ಮೂಟೆಯಂತೆ ಗಟ್ಟಿಮುಟ್ಟಾಗಿ ಬೆಳಗಿದ್ದ ದೇಹವು ಈ ದಿನ ದುರ್ಬಲವಾಗಿ ಸಾವಿನಿಂದ ಉರುಳಿ ಹೋಗಿದೆ.
ನಮ್ಮಯ ಹಕ್ಕಿ ಬಿಟ್ಟೆಬಿಟ್ಟೆ - ಈವರೆಗೂ ನಮ್ಮದೇ ಎಂದು ಭಾವಿಸಿದ್ದ ಈ ಹಕ್ಕಿ ಎಂದರೆ ಈ ಆತ್ಮವು ಈ ದೇಹವನ್ನು ಬಿಟ್ಟು ಹೊರಟಾಯ್ತು.
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ - ಇನ್ನು ಆ ಹಕ್ಕಿಯ ಮೇಲಿನ ಹಕ್ಕು ಈ ಭೂಮಿಯ ಮೇಲೆ ಏನೂ ಇಲ್ಲ. ಇದು ನಿಮ್ಮದೇ ಆದ್ದರಿಂದ ಆ ಹಕ್ಕಿಯನ್ನು ನೀವೇ ಹಿಡಿದುಕೊಳ್ಳಿ ಎಂದು ಅಜ್ಜಿಯ ರೂಪದ ಇಹಲೋಕ ದೇವರೊಂದಿಗೆ ಮಾಡುತ್ತಿರುವ ಸಂಭಾಷಣೆ.
ಒಂದು ಸಾವಿನ ಹಿಂದಿನ ಆಧ್ಯಾತ್ಮಿಕ ಅರ್ಥವನ್ನು ತುಂಬಾ ಸರಳವಾಗಿ ಆಟದ ಹಾಡಿನ ರೂಪದಲ್ಲಿ ವರ್ಣಿಸಿದ್ದಾರೆ.
ಡಿವಿಜಿಯವರು ತಮ್ಮ ಕಗ್ಗದಲ್ಲಿ ಕಣ್ಣು ಮುಚ್ಚಾಲೆಯಾಟವನ್ನು ಚರ್ಚಿಸುತ್ತಾ 'ಹುಟ್ಟಿದ ತರುವಾಯ ಸಾಯಲೇಬೇಕಾದ ಅನಿವಾರ್ಯತೆಯಿರುವ ನಾವು ಅದರ ಪಾರಮಾರ್ಥಿಕ ಸಾಧನೆಗಾಗಿ ಹುಡುಕಾಟ ನಡೆಸಬೇಕು. ಹುಟ್ಟು ಸಾವಿನ ನಡುವಿನ ಬಾಳನ್ನು ಸಾರ್ಥಕತೆಯಿಂದ ನಡೆಯುವಂತೆ ನೋಡಿಕೊಳ್ಳಬೇಕು. ದೇವನಾಟದಂತೆ ನಡೆದು ಕೊನೆಗೆ ದೇವರನ್ನು ಸೇರಿಕೊಳ್ಳುವ ಯತ್ನ ನಡೆಸಬೇಕು ಎಂದು ತಿಳಿಸಿದ್ದಾರೆ.
Comments
Post a Comment