ಕಾಲೇಜಿನ ಅತಿ ಹಿರಿಯ ವಿದ್ಯಾರ್ಥಿ ಶಿವಣ್ಣ ನಗರದ ಹೋಟೆಲೊಂದರಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಯೋಜಿಸಿದ್ದಾನೆ. ಅವನ ಬ್ಯಾಚಿನ ಸುಮಾರು ೧೮ ಜನ ನಿವೃತ್ತರಾದ ನಾವು ಸೇರಿದ್ದೇವೆ. ಇವರಲ್ಲಿ ೬ ಹೆಣ್ಣು ಮಕ್ಕಳು ಇದ್ದಾರೆ, ಈಗ ಹೆಂಗಸರು ಎನ್ನಿ, ಎಲ್ಲಾ ಸೇರಿದ್ದೇವೆ. ನೋಡಿ ಎಷ್ಟೊ ವರ್ಷಗಳಾಗಿದ್ದಕ್ಕೋ, ಬದಲಾದ ದೇಹ ಸೌಂದರ್ಯವೋ, ವಯೋಸಹಜ ಮರೆವೋ ಗೊತ್ತಿಲ್ಲ ಅಂತೂ ಯಾರನ್ನೂ ಗುರುತಿಸಲಾಗುತ್ತಿಲ್ಲ. ಇಷ್ಟೆಲ್ಲಾ ಯೋಚಿಸುತ್ತಿರುವ ಓಂಕಾರಿಗೆ ಅವನ ಹಳೇ ಕ್ಲಾಸ್ ಮೇಟ್ ದಾನಮ್ಮ ಮಾತ್ರ ನೆನಪಿನಲ್ಲಿದ್ದಾಳೆ, ಅವಳೂ ಬಂದಿರಬಹುದು. ಅವಳ ಮುಖ ಕಾಣದೆ ಕಸಿವಿಸಿಯಾಗುತ್ತಿದೆ. ಅವಳೇನು ಬರ್ತಾಳೋ ಇಲ್ಲೋ ಎಂದು ಕೊಂಡರೂ ಬರ್ತಾಳೆ ನೋಡು ಎಂದು ತನ್ನಲ್ಲೇ ಸ್ವಗತದಲ್ಲಿದ್ದಾನೆ.
ಮೊದಲ ದಿನದ ಈ ಸಂಜೆ ಎಲ್ಲರೂ ಸೇರಿದ್ದಾರೆ. ಹೊಸದಾಗಿ ಪರಿಚಯ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಮನಗಂಡು ಸಂಯೋಜಕ ಶಿವಣ್ಣ ಹೊಸ ಐಡಿಯಾ ಮಾಡಿದ್ದಾನೆ. ಎಲ್ಲರ ಅಡ್ಡಹೆಸರು ಕೇಳಿ ಅದನ್ನು ಕಾರ್ಡಿನಲ್ಲಿ ಬರೆಸಿ ಪ್ರತಿಯೊಬ್ಬರ ಎದೆಗೆ ನೇತು ಹಾಕಿದ್ದಾನೆ. ಈಗ ನಿಧಾನವಾಗಿ ಇರೋ ೧೫-೧೫ ಅಡಿ ಜಾಗದ ಹಾಲ್ ನಲ್ಲಿ ಎಲ್ಲರೂ ಎದುರು ಬದುರು ಬರುವಂತೆ ಸುತ್ತಬೇಕು. ಶಿವಣ್ಣ ರಿಮೋಟ್ ನಲ್ಲಿ ಮ್ಯೂಸಿಕ್ ಹಾಕುವುದು ನಿಲ್ಲಿಸುವುದು ಮಾಡುತ್ತಿರುತ್ತಾನೆ. ಅವನು ಯಾವಾಗ ಮ್ಯೂಸಿಕ್ ನಿಲ್ಲಿಸುವನೋ ಆ ವೇಳೆಯಲ್ಲಿ ಎದುರಿಗಿದ್ದವರ ಹೆಸರು ಓದಿ ಪರಿಚಯ ಮಾಡಿಕೊಳ್ಳಬೇಕು. ಹಾಗೆ ಎರಡನೇ ಬಾರಿ ಮ್ಯೂಸಿಕ್ ನಿಲ್ಲಿಸಿದಾಗ, ಆಶ್ಚರ್ಯ, ಓಂಕಾರಿ ದಾನಮ್ಮ ಮುಖಾಮುಖಿಯಾದರು. ಇಬ್ಬರಿಗೂ ಏನೋ ಖುಷಿ. ಸರಿ ಮತ್ತೆ ಮ್ಯೂಸಿಕ್ ಪ್ರಾರಂಭವಾಗಿ ನಿಂತಾಗ ಯಥಾ ಪ್ರಕಾರ ಓಂಕಾರಿ ದಾನಮ್ಮ ಮುಖಾಮುಖಿ. ಹೀಗೆಯೇ ಆಟ ಮುಗಿಯುವವರೆಗೂ ಅವರಿಬ್ಬರ ಮುಖಾಮುಖಿ ಮಾತ್ರ ಕಡೇವರೆಗೂ ಮುಂದುವರಿಯಿತು. ಈ ವೇಳೆಯಲ್ಲಿ ಅವಳ ವಿಷಯ ಇವನಿಗೆ, ಇವನ ವಿಷಯ ಅವಳಿಗೆ ಹೇಳಿಕೊಳ್ಳಲು ಅವಕಾಶವಾಯಿತು. ದಾನಮ್ಮಗೆ ೬೩ ವಯಸ್ಸಾಗಿದೆ. ಗಂಡ ಕೈಲಾಸ ಸೇರಿಕೊಂಡು ಎರಡು ವರ್ಷವಾಗಿದೆ. ಇರೋ ಎರಡು ಮಕ್ಕಳಿಗೆ ಇರೋ ಆಸ್ತಿ ಬೇಡ, ಅಮ್ಮ ಹೇಗೂ ಜರ್ಮನಿಗೆ ಬರೋಕೆ ರೆಡಿ ಇಲ್ಲ ಎಂದು ಇಲ್ಲೇ ಏನಾದರೂ ಮಾಡಿಕೋ ಎಂದಿದ್ದಾರೆ. ಇವಳೋ ಅವರಿವರು ಸಂಬಂಧಿಗಳ ಮನೆಗೆಂದು ಓಡಾಡಿಕೊಂಡು ಹಳೇ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಳೆ. ಇನ್ನು ಓಂಕಾರಿ. ಎಂದೋ ವಿದುರನಾಗಿದ್ದಾನೆ. ಮಗಳು ಮದುವೆಯಾಗಿ ಮೈಸೂರಲ್ಲಿದ್ದಾಳೆ. ಅವಳ ಸಂಪರ್ಕವೂ ಅಷ್ಟಕಷ್ಟೇ. ಮಗ ಸ್ವೀಡನ್ನಿನಲ್ಲಿ ಇದ್ದಾನೆ. ಅವನು ಬಂದು ಮೂರು ನಾಲ್ಕು ವರ್ಷಗಳಾಯ್ತೇನೋ, ನೆನಪಿಗೆ ಬರ್ತಾ ಇಲ್ಲ. ದಾನಮ್ಮ ಇತರ ಮಿತ್ರರೊಂದಿಗೆ ಮಾತನಾಡಲು ಹೋಗಿದ್ದಾಗ ಏನೋ ಗಾಢವಾಗಿ ಯೋಚಿಸುತ್ತಿದ್ದ ಓಂಕಾರಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ರಾತ್ರಿ ಊಟದ ಹೊತ್ತಿನಲ್ಲಿ ದಾನಮ್ಮ ಎದುರು ಕುಳಿತಿದ್ದಾಳೆ. ಅದೂ ಇದೂ ಮಾತಾಡುತ್ತಾ ಓಂಕಾರಿ ಹೆದರಿಕೊಳ್ಳುತ್ತಲೇ ಹಠಾತ್ತಾಗಿ ಅವಳೊಂದಿಗೆ ಒಂದು ಪ್ರಪೋಸಲ್ ಇಟ್ಟ. ಹೇಗೂ ನೀನೂ ಒಬ್ಬಳೇ ಇರೋದು ಹಾಗೆಯೇ ನಾನೂ ಸಹ. ನಾವಿಬ್ಬರೂ ಯಾಕೆ ಮದುವೆಯಾಗಬಾರದು? ಈ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ನೋಡಿಕೊಂಡು ಇದ್ದರೆ ಒಳ್ಳೆಯದು ಅಲ್ಲವೇ ಎಂದ. ವಿದ್ಯಾರ್ಥಿ ಜೀವನದಲ್ಲೇ ಆಸೆಯಿದ್ದರೂ ಹೇಳಲಾಗಲಿಲ್ಲ ಎಂದು ಬಿಟ್ಟ. ಅವಳೂ ಅಲ್ಲಿ ಇಲ್ಲಿ ನೋಡುತ್ತಾ ಯೋಚಿಸುತ್ತಾ, ಹೂಂ ಆಗಲಿ ಎಂದು ನಿಧಾನವಾಗಿ ಹೇಳಿದಳು. ಇವನೂ ಸಂತೋಷ ಸಮಾಧಾನ ಹೆಚ್ಚಾಗಿ ಅಲ್ಲಿಯೇ ಟೇಬಲ್ ಮೇಲಿಟ್ಟಿದ್ದ ಊಟವನ್ನೇ ಮತ್ತೆ ಬೇಕಾ, ಬೇಕಾ ಎಂದು ಉಪಚರಿಸಿದ. ಊಟವಾಯಿತು. ಆಗಲೇ ತಡವಾಗಿದ್ದರಿಂದ ಅವರವರು ಉಳಿದ ಹೋಟೆಲ್ ರೂಂ ಗೆ ಹೋದರು.
ಓಂಕಾರಿಗೆ ಮಲಗಿದಾಗೇನೋ ತಕ್ಷಣ ನಿದ್ದೆ ಬಂತು. ಹೊಸ ಜಾಗವೋ, ಹೊಸ ಹಾಸಿಗೆಯೋ, ತಿಂದ ಆಹಾರಕ್ಕೋ ಅಂತೂ ನಡುರಾತ್ರಿ ಎಚ್ಚರವಾಯಿತು. ಹಿಂದಿನ ದಿನ ರಾತ್ರಿ ನಡೆದ ಅವಿಸ್ಮರಣೀಯ ಪರಿಣಯ ಪ್ರಸ್ತಾಪ ರೀತಿಯನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ. ಓಂಕಾರಿಗೆ ಇದ್ದಕ್ಕಿದ್ದಂತೆ ಅನುಮಾನ ಶುರುವಾಯಿತು. ನೀನು ನನ್ನನ್ನು ಮದುವೆ ಯಾಗುತ್ತೀಯಾ ಎಂದು ಕೇಳಿದೆ. ಅವಳೇನಂದಳು. ಎಸ್ ಎಂದಳೋ ನೋ ಅಂದಳೋ. ನೆನಪಿಗೆ ಬರ್ತಾ ಇಲ್ಲ. ಏನಂದಳೂ, ಏನಂದಳೂ ಎಂದು ಯೋಚಿಸಿಯೇ ಯೋಚಿಸಿದ. ಸುಡುಗಾಡು, ನನಗೇ ಮರೆತು ಹೋಯ್ತಾ, ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೋ ಅಥವಾ ಅವಳೇ ಏನೋ ಸರಿಯಾಗಿ ಹೇಳಲಿಲ್ಲವಾ. ಹೀಗೇ ಯೋಚಿಸುತ್ತಾ ಮಲಗಿದ ಓಂಕಾರಿಗೆ ನಿದ್ದೆ ಬಂದಾಗ ಬೆಳಗಾಗಿತ್ತು. ಎಚ್ಚರವಾದರೂ ನೆನಪಿಗೆ ಬರದ ಉತ್ತರ. ಈಗ ಹೇಗೆ ಕೇಳಲಿ ಎಂದುಕೊಂಡೇ ಸ್ನಾನ ಪೂಜೆ ಮುಗಿಸಿದ. ಇಂದಿನ ಕಾರ್ಯಕ್ರಮ ಉಪಾಹಾರದಿಂದ ಪ್ರಾರಂಭ ಎಂದಿದ್ದರೂ ಅವನಿಗೆ ಆ ಬಗ್ಗೆ ಚಿಂತೆ ಇಲ್ಲ, ಆದರೆ ತನ್ನ ಹಾಗೇ ಇರುವ ಬೇರೆಯವರು ಅವಳೊಂದಿಗೆ ಇದೇ ಪ್ರಸ್ತಾಪ ಮಾಡಿದರೆ ಎಂದು ಲಗುಬಗೆಯಿಂದ ಹೋಟೆಲ್ ಗೆ ಹೋದ. ಇನ್ನು ಉಪಹಾರ ಸೇವನೆ ನಡೆದಿತ್ತು. ಅಂತೂ ದಾನಮ್ಮನ ಹುಡುಕಿ ಎದುರು ಕುಳಿತು ಕೊಳ್ಳುವುದಕ್ಕೆ ಸಾಕಾಯಿತು. ಈಗ ಹೇಗೆ ಪ್ರಾರಂಭಿಸುವುದು ಎಂದು ಕೊಂಡೇ ಸ್ವಲ್ಪ ಹೊತ್ತು ಕಳೆದ. ಈ ನಡುವೆ ಯಾಕೋ ಮರೆವು ಅಲ್ಲವೇ ಎಂದು ಶುರು ಮಾಡಿದ. ಅಂದ್ಹಾಗೆ ನಿನ್ನೆ ನಾನು ಮದುವೆ ಬಗ್ಗೆ ಕೇಳಿದ್ದೆ ನೀನು ಏನಂದೆ, ಹೇಳು ಎಂದ. ಅವಳೋ ಸ್ವಲ್ಪ ಖುಷಿಯಿಂದಲೇ ಓ ನೀನಾ ಹಾಗೆ ಕೇಳಿದ್ದು. ನಾನು ಹೂಂ ಅಂತಲೇ ಅಂದೆ ಎಂದು ಗೊತ್ತಿದೆ. ಆದರೆ ಯಾರು ಮದುವೆ ಪ್ರಸ್ತಾಪ ಮಾಡಿದ್ದು ಎಂದು ರಾತ್ರಿಯಿಡೀ ಯೋಚಿಸಿ ಯೋಚಿಸಿ ಸಾಕಾಗಿತ್ತು. ಒಳ್ಳೆಯ ಪುಣ್ಯಾತ್ಮ ಎಂದಾಗ ಓಂಕಾರಿಗೆ ಬಂದ ದೊಡ್ಡ ಉಸಿರು ದೂರ ಕುಳಿತಿದ್ದ ಶಿವಣ್ಣನಿಗೂ ಕೇಳಿಸಿರಬಹುದು.
ಅಲ್ಲಿಯೇ ಇನ್ನೊಂದು ಘಟನೆ. ೬೫ರ ಪರಮೇಶಿಗೆ ಕಿವಿ ಸ್ವಲ್ಪ ಮಂದ. ಅತ್ತ ಅವಳ ಸಂಬಂಧಿ ಕ್ಲಾಸ್ ಮೇಟ್ ಪ್ರೇಮ ಬಂದಿದ್ದಾಳೆ. ಅವಳಿಗೋ ಅಪ್ಪೂಟ್ ಕೇಳಿಸೋದೇ ಇಲ್ಲ. ಅದೇಕೋ ಅವನ ಹಿಂದೆ ಹಿಂದೆ ಅವಳು ಹೋದರೂ ಅವನು ತಿರುಗವಲ್ಲ. ಆದರೂ ಅವಳ ಮಾತಿಗೆ ಉತ್ತರ ಕೊಡುತಿದ್ದ. ಅವನು ಹೋಗುವುದನ್ನು ನೋಡಿ, ಕೈ ತೊಳೆದು ಕೊಳ್ಳಲು ಹೋಗುತ್ತಿದ್ದೀಯಾ ಎಂದಳು. ಇಲ್ಲ ಇಲ್ಲೇ ಕೈ ತೊಳೆದು ಕೊಂಡು ಬರಲು ಹೋಗುತ್ತಿದ್ದೇನೆ ಎಂದ. ಹೌದಾ, ನೀನೇನೋ ಕೈ ತೊಳೆದು ಕೊಳ್ಳಲು ಹೋಗುತ್ತಿದ್ದೀಯ ಎಂದು ಕೊಂಡೆ ಎಂದಳು. ಅವನೋ, ಇಲ್ಲ ಇಲ್ಲ, ಇಲ್ಲೇ ಕೈ ತೊಳೆದು ಕೊಂಡು ಬರೋಕೆ ಹೋಗುತ್ತಿದ್ದೇನೆ ಎಂದ. ಕೇಳಿಸದವರ ಈ ಸಂಭಾಷಣೆ ಕೇಳಿಸುವವರಿಗೆ ಅರ್ಥವೇ ಆಗಲಿಲ್ಲ. ಇವುಗಳ ಮಧ್ಯೆ ಹಿರಿಯ ನಾಗರಿಕರ ಸಮಸ್ಯೆಗಳು, ಪರಿಹಾರೋಪಾಯ ಇತ್ಯಾದಿಗಳ ಚರ್ಚೆಯಲ್ಲಿ ಇಂತಹಾ ಸ್ವಾರಸ್ಯಕರ ಘಟನೆಗಳು ನಡೆದಿತ್ತು.
ಪರಿಣಯ ಪ್ರಸ್ತಾಪ ಚಿಕ್ಕದಾಗಿ ಚೊಕ್ಕವಾಗಿ ಅರ್ಥಗರ್ಭಿತವಾಗಿದೆ. ಜನರು ವಯಸ್ಸಿಗಿಂತ, ವಯಸ್ಸಾದಮೇಲೆ ಬೇರೆಯೊಬ್ಬರ ಮೇಲೆ ಅವಲಂಬಿಸುವಂತೆ ಆಗುತ್ತದೆ. ಇದು ದೈಹಿಕ ಆಕರ್ಷಣೆ ಅಲ್ಲ. ಮಾನಸಿಕವಾಗಿ ಅವರಿಗಾಗಿ ಸ್ಪಂದಿಸುವ ಜೀವವೊಂದು ಬೇಕಾಗುತ್ತದೆ.ಅದರಲ್ಲೂ ಗಂಡ ಅಥವಾ ಹೆಂಡತಿ, ಮಕ್ಕಳಿಂದ ದೂರವಾಗಿ ಬಿಟ್ಟು, ಒಂಟಿಯಾಗಿ ಬಿಟ್ಟರೆ ನಿಜವಾಗಿ ಅವರು ಅನಾಥರಾಗಿ ಬಿಡುತ್ತಾರೆ. ಅಂತಹ ಸಮಯದಲ್ಲಿ ಜೊತೆಯಾಗಿ ಒಬ್ಬರು ಬೇಕೆನಿಸುವುದು ಸಹಜ. ಇದರಲ್ಲಿ ಓಂಕಾರ ಮತ್ತು ದಾನಮ್ಮ ಇಬ್ಬರು ಒಂದೇ ದೋಣಿಯ ಪಯಣಿಗರು ಆಗಿರುವುದರಿಂದ ಅವರ ನಿರ್ಧಾರ ಸರಿಯಾಗಿದೆ.
ReplyDelete